ಯೆರೆಮೀಯ 41
41
1ಏಳನೆಯ ತಿಂಗಳಲ್ಲಿ ಅರಸನ ಸಂತಾನದವನೂ, ಅರಸನ ಪ್ರಧಾನರಲ್ಲಿ ಒಬ್ಬನೂ ಆದಂಥ ಎಲೀಷಾಮನ ಮೊಮ್ಮಗನೂ, ನೆತನ್ಯನ ಮಗನೂ ಆದ ಇಷ್ಮಾಯೇಲನು ಅವನ ಸಂಗಡ ಹತ್ತು ಮಂದಿಯೂ ಮಿಚ್ಪದಲ್ಲಿದ್ದ ಅಹೀಕಾಮನ ಮಗ ಗೆದಲ್ಯನ ಬಳಿಗೆ ಬಂದರು. ಅವರು ಮಿಚ್ಪದಲ್ಲಿಯೇ ಊಟಮಾಡುತ್ತಿದ್ದಾಗ, 2ನೆತನ್ಯನ ಮಗ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಜನರಸಹಿತವಾಗಿ ಎದ್ದು, ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮೊಮ್ಮಗ ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಹೊಡೆದು ಕೊಂದುಹಾಕಿದನು. 3ಇದಲ್ಲದೆ ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಅಲ್ಲಿ ಸಿಕ್ಕಿದ ಯೆಹೂದ್ಯರೆಲ್ಲರನ್ನೂ, ಕಸ್ದೀಯರೆಲ್ಲರನ್ನೂ, ಸೈನಿಕರನ್ನೂ ಇಷ್ಮಾಯೇಲನು ಕೊಂದುಹಾಕಿದನು.
4ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೆಯ ದಿನದಲ್ಲಿ, ಅದು ಯಾರಿಗೂ ತಿಳಿಯದ ವೇಳೆಯಲ್ಲಿ 5ಶೆಕೆಮಿನಿಂದಲೂ ಶೀಲೋವಿನಿಂದಲೂ ಸಮಾರ್ಯದಿಂದಲೂ ಎಂಬತ್ತು ಜನರು ಗಡ್ಡವನ್ನೂ ಕ್ಷೌರ ಮಾಡಿದವರಾಗಿಯೂ ವಸ್ತ್ರಗಳನ್ನು ಹರಿದುಕೊಂಡವರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಯೆಹೋವ ದೇವರ ಆಲಯಕ್ಕೆ ತರುವುದಕ್ಕೋಸ್ಕರ ಕಾಣಿಕೆಯನ್ನೂ, ಧೂಪವನ್ನೂ ಕೈಯಲ್ಲಿ ತೆಗೆದುಕೊಂಡು ಬಂದರು. 6ಆಗ ನೆತನ್ಯನ ಮಗ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು. ಅವರನ್ನು ಎದುರುಗೊಂಡ ಮೇಲೆ ಅವರಿಗೆ, “ಅಹೀಕಾಮನ ಮಗ ಗೆದಲ್ಯನ ಬಳಿಗೆ ಬನ್ನಿ,” ಎಂದನು. 7ಆಗ ಅವರು ಪಟ್ಟಣದ ಮಧ್ಯಕ್ಕೆ ಬಂದಾಗ, ನೆತನ್ಯನ ಮಗ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು, ಬಾವಿಯೊಳಗೆ ಹಾಕಿಬಿಟ್ಟರು. 8ಆದರೆ ಆ ಎಂಬತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಂದು ಹಾಕಬೇಡ. ಏಕೆಂದರೆ ನಮಗೆ ಹೊಲದಲ್ಲಿ ಗೋಧಿ, ಜವೆಗೋಧಿ, ಎಣ್ಣೆ, ಜೇನು ಇವುಗಳನ್ನು ಬಚ್ಚಿಟ್ಟಿದ್ದೇವೆ” ಎಂದು ಬಿನ್ನವಿಸಿದರು. ಆದ್ದರಿಂದ ಅವನು ಹಿಂದೆಗೆದು ಅವರನ್ನು, ಅವರ ಸಹೋದರರ ಮಧ್ಯದಲ್ಲಿ ಕೊಂದುಹಾಕಲಿಲ್ಲ. 9ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದುಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಬಾವಿಯು, ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ತೋಡಿಸಿದ್ದ ಬಾವಿಯೇ ಆಗಿತ್ತು. ಇದನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದು ಹಾಕಿದವರಿಂದ ತುಂಬಿಸಿದನು.
10ಇಷ್ಮಾಯೇಲನು ಮಿಚ್ಪದಲ್ಲಿದ್ದ ಜನರ ಉಳಿದವರನ್ನೆಲ್ಲಾ ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟು, ಉಳಿದ ಜನರೆಲ್ಲರನ್ನು ಸೆರೆಯಾಗಿ ಒಯ್ದನು. ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು, ಅಮ್ಮೋನ್ಯರ ಬಳಿಗೆ ದಾಟಿಹೋಗುವುದಕ್ಕೆ ಹೊರಟನು.
11ಆದರೆ ಕಾರೇಹನ ಮಗ ಯೋಹಾನಾನನೂ, ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ್ದ ಕೇಡನ್ನೆಲ್ಲಾ ಕೇಳಿದ ಮೇಲೆ, 12ಆ ಮನುಷ್ಯರನ್ನೆಲ್ಲಾ ಕರೆದುಕೊಂಡು ನೆತನ್ಯನ ಮಗ ಇಷ್ಮಾಯೇಲನ ಸಂಗಡ ಯುದ್ಧಮಾಡುವುದಕ್ಕೆ ಹೋಗಿ, ಗಿಬ್ಯೋನಿನಲ್ಲಿರುವ ದೊಡ್ಡ ಕೆರೆಯ ಬಳಿಯಲ್ಲಿ ಅವನನ್ನು ಕಂಡರು. 13ಆಗ ಇಷ್ಮಾಯೇಲನ ಸಂಗಡ ಇದ್ದ ಜನರೆಲ್ಲರೂ, ಕಾರೇಹನ ಮಗ ಯೋಹಾನಾನನನ್ನೂ, ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರನ್ನೂ ನೋಡಿದಾಗ, ಸಂತೋಷಪಟ್ಟರು. 14ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ತಂದ ಜನರೆಲ್ಲರು ಸುತ್ತಿಕೊಂಡು ತಿರುಗಿಕೊಂಡು, ಕಾರೇಹನ ಮಗನಾದ ಯೋಹಾನಾನನ ಬಳಿಗೆ ಬಂದರು. 15ಆದರೆ ನೆತನ್ಯನ ಮಗನಾದ ಇಷ್ಮಾಯೇಲನು ಎಂಟು ಜನರ ಸಂಗಡ ಯೋಹಾನಾನನಿಗೆ ತಪ್ಪಿಸಿಕೊಂಡು, ಅಮ್ಮೋನ್ಯರ ಬಳಿಗೆ ಹೋದನು.
ಈಜಿಪ್ಟಿಗೆ ಪಲಾಯನ
16ಆಗ ಕಾರೇಹನ ಮಗನಾದ ಯೋಹಾನಾನನೂ, ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗ ಗೆದಲ್ಯನನ್ನು ಕೊಂದುಹಾಕಿದ ತರುವಾಯ, ತಪ್ಪಿಸಿಬಿಟ್ಟಿದ್ದ ಉಳಿದ ಜನರೆಲ್ಲರನ್ನು ಎಂದರೆ, ಗಿಬ್ಯೋನನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಕಂಚುಕಿಯರನ್ನೂ ಮಿಚ್ಪದಿಂದ ಕರೆದುಕೊಂಡು ಹೊರಟು, 17ಈಜಿಪ್ಟಿಗೆ ಹೋಗುವುದಕ್ಕೆ ಬೇತ್ಲೆಹೇಮಿನ ಬಳಿಯಲ್ಲಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. 18ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಅಹೀಕಾಮನ ಮಗ ಗೆದಲ್ಯನನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದುಹಾಕಿದ್ದರಿಂದಲೇ, ಅವರಿಗೆ ಭಯಪಟ್ಟರು.
Currently Selected:
ಯೆರೆಮೀಯ 41: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.