YouVersion Logo
Search Icon

ಯೆರೆಮೀಯ 39

39
1ಯೆಹೂದದ ಅರಸನಾದ ಚಿದ್ಕೀಯನ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯದೊಂದಿಗೆ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದನ್ನು ಮುತ್ತಿಗೆ ಹಾಕಿದರು. 2ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣವು ಒಡೆಯಲಾಯಿತು. 3ನೇರ್ಗಲ್ ಸರೆಚರ್, ಸಮ್ಗರ್‌ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಚೋಯಿಸರ ಮುಖ್ಯಸ್ಥ ನೇರ್ಗಲ್ ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲಾ ಪದಾಧಿಕಾರಿಗಳು ಪುರಪ್ರವೇಶ ಮಾಡಿ, ಮಧ್ಯಮ ದ್ವಾರದೊಳಗೆ ಕುಳಿತುಕೊಂಡರು. 4ಇವರನ್ನು ನೋಡಿ ಯೆಹೂದದ ಅರಸನಾದ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
5ಆಗ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ, ಯೆರಿಕೋವಿನ ಬಯಲು ಸ್ಥಳದಲ್ಲಿ ಚಿದ್ಕೀಯನನ್ನು ಹಿಡಿದರು. ಅನಂತರ ಹಮಾತ್ ನಾಡಿನ ರಿಬ್ಲದಲ್ಲಿರುವ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಅವನನ್ನು ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. 6ಆ ಬಾಬಿಲೋನಿಯದ ಅರಸನು ಅಲ್ಲೇ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಯೆಹೂದದ ಎಲ್ಲಾ ಶ್ರೇಷ್ಠರನ್ನೂ ರಿಬ್ಲದಲ್ಲಿ ಕೊಲ್ಲಿಸಿದನು. 7ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಕಂಚಿನ ಬೇಡಿಹಾಕಿಸಿ, ಬಾಬಿಲೋನಿಗೆ ಸಾಗಿಸಿದನು.
8ಅರಮನೆಯನ್ನೂ, ಜನರ ಮನೆಗಳನ್ನೂ, ಬಾಬಿಲೋನಿಯರು ಬೆಂಕಿಯಿಂದ ಸುಟ್ಟರು. ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು. 9ಆಗ ಪಟ್ಟಣದೊಳಗೆ ಉಳಿದವರನ್ನೂ, ಮೊದಲೇ ತನ್ನನ್ನು ಮೊರೆ ಹೋದವರನ್ನೂ, ಇತರ ಸಮಸ್ತ ಜನರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಬಾಬಿಲೋನಿಗೆ ಸೆರೆಹಿಡಿದು ಕರೆದುಕೊಂಡು ಹೋದನು. 10ಆದರೆ ಜನರೊಳಗೆ ಏನಿಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶದಲ್ಲಿ ಬಿಟ್ಟು, ಅವರಿಗೆ ಆಗಲೇ ದ್ರಾಕ್ಷಿತೋಟಗಳನ್ನೂ, ಹೊಲಗಳನ್ನೂ ಕೊಟ್ಟನು.
11ಇದಲ್ಲದೆ ಯೆರೆಮೀಯನ ವಿಷಯವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನಿಗೆ ಆಜ್ಞಾಪಿಸಿದ್ದೇನೆಂದರೆ: 12“ಅವನನ್ನು ಚೆನ್ನಾಗಿ ನೋಡಿಕೋ, ಅವನಿಗೆ ಕೆಟ್ಟದ್ದೇನೂ ಮಾಡಬೇಡ; ಆದರೆ ಅವನು ನಿನಗೆ ಹೇಗೆ ಹೇಳುವನೋ, ಹಾಗೆಯೇ ಅವನಿಗೆ ಮಾಡು,” ಎಂದನು. 13ಹೀಗೆ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನನ್ನೂ, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳನ್ನೂ ಕಳುಹಿಸಿದನು. 14ಅವರು ಕಳುಹಿಸಿ ಯೆರೆಮೀಯನನ್ನು ಸೆರೆಮನೆಯ ಅಂಗಳದಿಂದ ತೆಗೆಸಿ, ಶಾಫಾನನ ಮೊಮ್ಮಗನೂ ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮನೆಗೆ ಕರೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟರು. ಹಾಗೆ ಅವನು ಜನರ ಮಧ್ಯದಲ್ಲಿ ವಾಸವಾಗಿದ್ದನು.
15ಯೆರೆಮೀಯನು ಸೆರೆಮನೆಯ ಅಂಗಳದಲ್ಲಿರುವಾಗ ಯೆಹೋವ ದೇವರ ವಾಕ್ಯವು ಅವನಿಗೆ ಹೇಳಿದ್ದೇನೆಂದರೆ: 16“ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ, ಹೇಳತಕ್ಕದ್ದೇನೆಂದರೆ: ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಒಳ್ಳೆಯದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ. ಅವು ಆ ದಿವಸಗಳಲ್ಲಿ ನಿನ್ನ ಮುಂದೆಯೇ ನೆರವೇರುವುವು. 17ಆದರೆ ಆ ದಿವಸದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲಾಗುವುದಿಲ್ಲ. 18ಏಕೆಂದರೆ ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು. ನೀನು ಖಡ್ಗದಿಂದ ಬೀಳುವುದಿಲ್ಲ. ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ, ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವುದೆಂದು ಯೆಹೋವ ದೇವರು ಹೇಳುತ್ತಾರೆ,’ ” ಎಂಬುದು.

Highlight

Copy

Compare

Share

None

Want to have your highlights saved across all your devices? Sign up or sign in

Video for ಯೆರೆಮೀಯ 39