ಯಾಕೋಬನು 3
3
ನಾಲಿಗೆಯನ್ನು ಬಿಗಿ ಹಿಡಿಯುವುದು ಅವಶ್ಯ
1ನನ್ನ ಪ್ರಿಯರೇ, ಬೋಧಕರಾದ ನಮಗೆ ದೊಡ್ಡ ದಂಡನೆಯಾಗುವುದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ. 2ಏಕೆಂದರೆ ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವುದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ, ಅವನು ಪರಿಪೂರ್ಣನೂ ತನ್ನ ಇಡೀ ದೇಹವನ್ನೇ ಸ್ವಾಧೀನದಲ್ಲಿಟ್ಟುಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ.
3ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ, ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವುದಕ್ಕೆ ಆಗುತ್ತದೆ. 4ಹಡಗುಗಳ ಉದಾಹರಣೆಯೂ ಅದರಂತೆ ಇದೆ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ನಡೆಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ಅವುಗಳನ್ನು ತಿರುಗಿಸುತ್ತಾನೆ. 5ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಒಂದು ಸಣ್ಣ ಬೆಂಕಿ ಕಿಡಿಯು ದೊಡ್ಡಕಾಡನ್ನೇ ಸುಟ್ಟುಬಿಡುತ್ತದೆ ನೋಡಿರಿ. 6ನಮ್ಮ ದೇಹದ ಅಂಗಗಳಲ್ಲಿ ನಾಲಿಗೆಯು ಸಹ ಬೆಂಕಿಯೂ ದುಷ್ಟ ಲೋಕವೂ ಆಗಿದೆ. ಹೀಗೆ ನಾಲಿಗೆಯು ನಮ್ಮ ಅಂಗಗಳಲ್ಲಿ ಇದ್ದು, ಇಡೀ ದೇಹವನ್ನೆಲ್ಲಾ ಮಲಿನಗೊಳಿಸುತ್ತದೆ. ಅದು ನರಕದ ಬೆಂಕಿಯಿಂದ ಹೊತ್ತಿಕೊಂಡು, ಮಾನವರ ಇಡೀ ಜೀವನಕ್ಕೆ ಬೆಂಕಿ ಹಚ್ಚುವದಾಗಿದೆ.
7ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಮಾನವರು ಹತೋಟಿಗೆ ತರುತ್ತಾರೆ ಮತ್ತು ತಂದಿದ್ದಾರೆ. 8ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸ್ವಾಧೀನವಾಗದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿಕೊಂಡಿದೆ.
9ಅದೇ ನಾಲಿಗೆಯಿಂದ ನಮ್ಮ ತಂದೆಯಾದ ಕರ್ತದೇವರನ್ನು ಕೊಂಡಾಡುತ್ತೇವೆ, ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಸೃಷ್ಟಿಸಲಾದ ಮನುಷ್ಯರನ್ನು ನಾವು ಶಪಿಸುತ್ತೇವೆ. 10ಅದೇ ಬಾಯಿಂದ ಸ್ತುತಿ ಮತ್ತು ಶಾಪ ಬರುತ್ತವೆ. ನನ್ನ ಪ್ರಿಯರೇ, ಇವುಗಳು ಹೀಗಿರಬಾರದು. 11ಒಂದೇ ಬುಗ್ಗೆಯಿಂದ ಸಿಹಿನೀರನ್ನೂ ಉಪ್ಪುನೀರನ್ನೂ ಒಂದೇ ಸ್ಥಳದಿಂದ ಹೊರಡಿಸುವುದುಂಟೇ? 12ನನ್ನ ಪ್ರಿಯರೇ, ಅಂಜೂರದ ಮರವು ಎಣ್ಣೇಮರದ ಕಾಯನ್ನು ಬಿಡುವುದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಉಪ್ಪುನೀರಿನ ಬುಗ್ಗೆಯು ಸಿಹಿನೀರನ್ನು ಕೊಡಲು ಎಂದಿಗೂ ಸಾಧ್ಯವಿಲ್ಲ.
ನಿಜವಾದ ಜ್ಞಾನದ ಲಕ್ಷಣಗಳು
13ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಜ್ಞಾನದಿಂದ ಬರುವ ದೀನತ್ವದಲ್ಲಿ ತನ್ನ ಕ್ರಿಯೆಗಳನ್ನು ಒಳ್ಳೆಯ ಜೀವನದಿಂದ ತೋರಿಸಲಿ. 14ನಿಮ್ಮ ಹೃದಯದೊಳಗೆ ಕಹಿಯಾದ ಹಗೆತನವನ್ನೂ ಸ್ವಾರ್ಥ ಉದ್ದೇಶವನ್ನು ಕೂಡಿಟ್ಟು ಕೊಂಡಿರುವಲ್ಲಿ, ನೀವು ಜ್ಞಾನದ ಕುರಿತು ಹೊಗಳಿಕೊಳ್ಳಬೇಡಿರಿ ಮತ್ತು ಸತ್ಯವನ್ನು ನಿರಾಕರಿಸಬೇಡಿರಿ. 15ಅಂಥ ಜ್ಞಾನವು ದೈವಿಕ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು. ಅದು ಆತ್ಮಿಕವಾದದ್ದಲ್ಲ. ಅದು ದೆವ್ವಗಳಿಗೆ ಸಂಬಂಧಪಟ್ಟದ್ದು. 16ಏಕೆಂದರೆ ನಿಮ್ಮಲ್ಲಿ ಹೊಟ್ಟೆಕಿಚ್ಚೂ ಸ್ವಾರ್ಥ ಉದ್ದೇಶವೂ ಇರುವಲ್ಲಿ ಗಲಿಬಿಲಿಯೂ ಸಕಲ ವಿಧವಾದ ಕೆಟ್ಟ ಅಭ್ಯಾಸವೂ ಇರುತ್ತವೆ.
17ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ. 18ಸಮಾಧಾನ ಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುತ್ತಾರೆ.
Currently Selected:
ಯಾಕೋಬನು 3: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.