YouVersion Logo
Search Icon

ಯಾಕೋಬನು 1

1
1ದೇವರಿಗೂ ಕರ್ತ ಆಗಿರುವ ಯೇಸು ಕ್ರಿಸ್ತರಿಗೂ ದಾಸನಾಗಿರುವ ಯಾಕೋಬನು,
ವಿವಿಧ ದೇಶಗಳಲ್ಲಿ ಚದರಿರುವ ಇಸ್ರಾಯೇಲರ ಹನ್ನೆರಡು ಗೋತ್ರದವರಿಗೆ ಬರೆಯುವುದು:
ನಿಮಗೆ ಶುಭವಾಗಲಿ.
ಕಷ್ಟಗಳು ಮತ್ತು ಶೋಧನೆಗಳು
2ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ಸಂತೋಷದಿಂದ ಎಣಿಸಿಕೊಳ್ಳಿರಿ. 3ನಿಮ್ಮ ನಂಬಿಕೆಯ ಪರೀಕ್ಷೆಯು ದೃಢ ನಿಷ್ಠೆಯನ್ನು ಉಂಟುಮಾಡುತ್ತದೆ ಎಂದು ತಿಳಿದಿದ್ದೀರಿ. 4ಆ ದೃಢ ನಿಷ್ಠೆಯು ನಿಮ್ಮಲ್ಲಿ ಪೂರ್ಣ ಕ್ರಿಯೆಯನ್ನು ಉಂಟುಮಾಡಿದಾಗ, ಆಗ ನೀವು ಪರಿಪಕ್ವತೆಗೆ ಬಂದವರೂ ಪರಿಪೂರ್ಣರೂ ಯಾವ ಕೊರತೆಯೂ ಇಲ್ಲದವರೂ ಆಗಿರುವಿರಿ. 5ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು. 6ನೀವು ಕೇಳಿಕೊಂಡಾಗ ಸ್ವಲ್ಪವೂ ಸಂದೇಹ ಪಡದೆ ನಂಬಿಕೆಯಿಂದ ಕೇಳಿಕೊಳ್ಳಿರಿ. ಏಕೆಂದರೆ ಸಂದೇಹ ಪಡುವವನು ಬಿರುಗಾಳಿಯ ಬಡಿತಕ್ಕೆ ಒಳಗಾದ ಸಮುದ್ರದ ತೆರೆಯಂತೆ ಅಲೆದಾಡುತ್ತಿರುವನು. 7ಅಂಥವನು ತಾನು ಕರ್ತ ದೇವರಿಂದ ಏನಾದರೂ ಹೊಂದುವೆನೆಂದು ನಿರೀಕ್ಷಿಸದೆ ಇರಲಿ. 8ಅಂತಹ ವ್ಯಕ್ತಿ ಎರಡು ಮನಸ್ಸುಳ್ಳವನೂ ತನ್ನ ಮಾರ್ಗಗಳಲ್ಲೆಲ್ಲಾ ಚಂಚಲನೂ ಆಗಿದ್ದಾನೆ.
9ಹೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ. 10ಐಶ್ವರ್ಯವಂತನಾದ ಸಹೋದರನು, ತಾನು ದೀನಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ. ಆದರೆ ಐಶ್ವರ್ಯವಂತನು ಕಾಡು ಹೂವಿನಂತೆ ಮರೆಯಾಗುವನು. 11ಸೂರ್ಯನು ಉದಯಿಸಿದ ತರುವಾಯ ಉಷ್ಣತೆಯಿಂದ ಗಿಡ ಬಾಡಲು, ಅದರ ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುವುದಷ್ಟೆ. ಹೀಗೆಯೇ ಐಶ್ವರ್ಯವಂತನು ತನ್ನ ದಾರಿಗಳಲ್ಲಿ ಬಾಡಿಹೋಗುವನು.
12ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು.
13ಯಾರಿಗಾದರೂ ಶೋಧನೆ ಬಂದಾಗ, “ದೇವರು ನನ್ನನ್ನು ಶೋಧಿಸುತ್ತಿದ್ದಾರೆ ಎಂದು ಹೇಳಬಾರದು,” ಏಕೆಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರರು. ಅವರು ಯಾರನ್ನೂ ಶೋಧಿಸುವುದೂ ಇಲ್ಲ. 14ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಆಕರ್ಷಿಸಿ ಮರುಳುಗೊಂಡವನಾಗಿ ಶೋಧನೆಗೆ ಒಳಗಾಗುವನು. 15ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಸಂಪೂರ್ಣವಾದ ಮೇಲೆ ಮರಣವನ್ನು ಹೆರುತ್ತದೆ.
16ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ. 17ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ. 18ತಂದೆಯು ತಮ್ಮ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಅವರ ಸರ್ವ ಸೃಷ್ಟಿಗಳಲ್ಲಿ ಪ್ರಥಮ ಫಲವಾದೆವು.
ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವುದು
19ನನ್ನ ಪ್ರಿಯರೇ ಇದನ್ನು ತಿಳಿಯಿರಿ, ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ತೀವ್ರವಾಗಿಯೂ ಮಾತನಾಡುವುದರಲ್ಲಿ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ. 20ಏಕೆಂದರೆ ಮನುಷ್ಯನ ಕೋಪವು ದೇವರು ಬಯಸುವ ನೀತಿಯ ಜೀವನವನ್ನು ತರುವುದಿಲ್ಲ. 21ಆದಕಾರಣ ಎಲ್ಲಾ ಮಾಲಿನ್ಯವನ್ನೂ ಉಳಿದಿರುವ ದುಷ್ಟತನವನ್ನೂ ತೆಗೆದುಹಾಕಿ, ನಿಮ್ಮೊಳಗೆ ಬೇರೂರಿರುವ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.
22ನೀವು ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ. 23ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡ ಮನುಷ್ಯನಂತಿರುವನು. 24ಏಕೆಂದರೆ ಇವನು ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಹೋಗಿದ್ದರೂ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು. 25ಆದರೆ ಸ್ವಾತಂತ್ರ್ಯವನ್ನುಂಟುಮಾಡುವ ಪರಿಪೂರ್ಣವಾದ ನಿಯಮವನ್ನು ಲಕ್ಷ್ಯವಿಟ್ಟು ನೋಡುತ್ತಲೇ ಇರುವವನು, ಆ ವಾಕ್ಯವನ್ನು ಕೇಳಿದರೂ ಮರೆತು ಹೋಗದೆ ಅದರಂತೆ ನಡೆಯುವವನಾದ್ದರಿಂದ ಅವನು ಧನ್ಯನಾಗುವನು.
26ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜಕವಾಗಿದೆ. 27ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಅವರ ಸಂಕಟದಲ್ಲಿ ಪರಾಮರಿಸಿ, ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ದೋಷವೂ ಆಗಿರುವ ಭಕ್ತಿ.

Currently Selected:

ಯಾಕೋಬನು 1: KSB

Highlight

Copy

Compare

Share

None

Want to have your highlights saved across all your devices? Sign up or sign in